
ಇಲ್ಲಿನ ಪುರಾಣ ಪ್ರಸಿದ್ಧ ಭ್ರಾಮರೀ
ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಸಂಸದ ಶ್ರೀ ನಳಿನ್ ಕುಮಾರ್, ಶಾಸಕ ಶ್ರೀ ಅಭಯಚಂದ್ರ, ಆಡಳಿತಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ,
ಆನುವಂಶಿಕ ಮೊಕ್ತೇಸರ ಶ್ರೀ ವಾಸುದೇವ ಆಸ್ರಣ್ಣ, ಪ್ರಬಂಧಕ ಶ್ರೀ ವಿಶ್ವೇಶ್ ರಾವ್, ಧಾರ್ಮಿಕ ದತ್ತಿ ಇಲಾಖೆಯ ತಹಶಿಲ್ದಾರ್ ಶ್ರೀ ಎ.ಆರ್. ಪ್ರಭಾಕರ್, ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ,
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀ ರಾಜೇಂದ್ರ ಕಲ್ಬಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು. ಕಳೆದ ಫೆಬ್ರವರಿಯಲ್ಲಿ ದೇಗುಲಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಶ್ರೀ
ನಂದಕುಮಾರ್ ಸೂಚಿಸಿರುವ ಕಾರ್ಯಗಳ ಬಗ್ಗೆ ಪ್ರಮುಖ ಚರ್ಚೆ ನಡೆಯಿತು. ದೇಗುಲದ ಒಳಗೆ ಶುಚಿತ್ವ, ಏರ್ಕೂಲರ್ ಅಳವಡಿಕೆ, ಉಗ್ರಾಣದಲ್ಲಿರುವ ಹಳೆಯ ಸ್ಟೀಮ್ ಬಾಯ್ಲರ್ಗಳ ರಿಪೇರಿ, ಭೋಜನ ಶಾಲೆಯಲ್ಲಿ ಹೆಚ್ಚು ಮಂದಿಗೆ ಅವಕಾಶ ಇರುವಂತೆ ಬದಲಾವಣೆ ಕಾರ್ಯ,
ನದಿಯ ನೀರಿನಿಂದ ದೇಗುಲಕ್ಕೆ ವಿದ್ಯುತ್ ತಯಾರಿ, ಬಾಡಿಗೆ ಅಂಗಡಿದಾರರನ್ನು ಬಸ್ನಿಲ್ದಾಣದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದು, ಪ್ರವಾಸೋದ್ಯಮ ಇಲಾಖೆಯಿಂದ ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುವುದು,
ಗೋಶಾಲೆಯ ದುರಸ್ತಿ ಹೀಗೆ ಮೂವತ್ತೈದಕ್ಕೂ ಹೆಚ್ಚು ವಿಚಾರಗಳು ಚರ್ಚಿತವಾದವು. ಮಾಸ್ಟರ್ ಪ್ಲಾನ್ನಲ್ಲಿ ಅಳವಡಿಕೆಯಾಗುವ ಡ್ರೈನೇಜ್, ಉದ್ಯಾನವನ ಇತ್ಯಾದಿಗಳ ವಿವರವನ್ನು ಅಧಿಕಾರಿಗಳು ನೀಡಿದರು.